ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 16, 2023

Mahabharata Tatparya Nirnaya Kannada 26-241-246

 

ಸ ತೇನ ಬಾಣೈರ್ಬಹುಭಿಃ ಪ್ರಪೀಡಿತೋ ವಿಭಿನ್ನಗಾತ್ರಃ ಕ್ಷತಜಾಪ್ಲುತಾಙ್ಗಃ 

ವ್ಯಾವೃತ್ಯ ನೇತ್ರೇ ಕುಪಿತೋ ಮಹದ್ ಧನುರ್ವಿಷ್ಫಾರ್ಯ್ಯ ಬಾಣೈ ರಜನೀಂ ಚಕಾರ ॥೨೬.೨೪೧ ॥

 

ಘಟೋತ್ಕಚನ ಬಹಳ ಬಾಣಗಳಿಂದ ಚೆನ್ನಾಗಿ ಪೀಡಿಸಲ್ಪಟ್ಟ, ಗಾಯಗೊಂಡ ಅಂಗಾಂಗವುಳ್ಳ, ನೆತ್ತರಿನಿಂದ ತುಂಬಿದ ಮೈಯುಳ್ಳ ಅಶ್ವತ್ಥಾಮರು, ಮುನಿದು ಕಣ್ಣುಗಳನ್ನು ಅಗಲವಾಗಿ ಬಿಟ್ಟು, ತನ್ನ ದೊಡ್ಡ ಧನುಸ್ಸನ್ನು ತೆಗೆದುಕೊಂಡು, ಬಾಣಗಳಿಂದ ಎಲ್ಲೆಡೆ ಕತ್ತಲು ಮಾಡಿದರು.(ಎಲ್ಲೆಡೆ ಬಾಣಗಳಿಂದ ತುಂಬಿದರು)

 

ಸೋSಕ್ಷೋಹಿಣೀಂ ತಾಂ ಕ್ಷಣಮಾತ್ರತಃ ಕ್ಷರನ್ ಮಹಾಶರಾಂಸ್ತಾನಪಿ ರಾಕ್ಷಸಾನ್ ಕ್ಷಯಮ್ ।

ನಿನಾಯ ಪುತ್ರಂ ಚ ಘಟೋತ್ಕಚಸ್ಯ ನಿಷ್ಟ್ಯಂ ಪುರಾ ಯೋSಞ್ಜನವರ್ಮ್ಮನಾಮಕಃ ॥೨೬.೨೪೨ ॥

 

ಮಹಾಬಾಣಗಳನ್ನು ಪ್ರಯೋಗಿಸುತ್ತಾ  ಅಶ್ವತ್ಥಾಮರು, ಕೆಲವೇ ಸಮಯದಲ್ಲಿ ಆ ಅಕ್ಷೋಹಿಣಿಯನ್ನೂ, ಉಗ್ರವಾದ ಆಯುಧವುಳ್ಳ ರಾಕ್ಷಸರನ್ನೂ,  ಘಟೋತ್ಕಚನ ಮಗನಾದ ಅಂಜನವರ್ಮನನ್ನೂ ಕೊಂದು ಹಾಕಿದರು. ಅಂಜನವರ್ಮ ನಿಷ್ಟ್ಯ ಎನ್ನುವ ಒಬ್ಬ ದೇವತೆಯ ಅವತಾರ.

[ಮಹಾಭಾರತದ ಉದ್ಯೋಗಪರ್ವದಲ್ಲಿ ಹಿಡಿಮ್ಬೆಯ ಕಥಾ ಪ್ರಸಂಗದಲ್ಲಿ ಅಂಜನವರ್ಮನ ಕುರಿತು ಹೀಗೆ ಹೇಳಿದ್ದಾರೆ- ‘ಹೈಡಿಮ್ಬಶ್ಚ ಮಹಾಬಲಃ । ಪುತ್ರೋSಸ್ಯಾಞ್ಜನವರ್ಮಾ ತು ಮಹಾಬಲಪರಾಕ್ರಮಃ’ (೧೯೪.೨೦) ಈ ಪಾಠ ಅರ್ವಾಚಿನವಾಗಿ ‘ಪುತ್ರೋSಸ್ಯಾಞ್ಜನಪರ್ವಾ ತು’ ಎಂದು ತಪ್ಪಾಗಿ ಬಳಕೆಯಲ್ಲಿದೆ].

 

ನಿರೀಕ್ಷ್ಯ ಸೇನಾಂ  ಸ್ವಸುತಂ ಚ ಪಾತಿತಂ ಘಟೋತ್ಕಚೋ ದ್ರೋಣಸುತಂ ಶರೇಣ ।

ವಿವ್ಯಾಧ ಗಾಢಂ ಸ ತು ವಿಹ್ವಲೋ ಧ್ವಜಂ ಸಮಾಶ್ರಿತಶ್ಚಾSಶು ಸಸಙ್ಜ್ಞಕೋSಭವತ್ ॥೨೬.೨೪೩ ॥

 

ತನ್ನ ಸೇನೆಯೂ, ತನ್ನ ಮಗನೂ ಅಶ್ವತ್ಥಾಮರಿಂದ ಹತವಾದುದ್ದನ್ನು ಕಂಡ ಘಟೋತ್ಕಚನು, ಅವರನ್ನು ಉಗ್ರವಾದ ಬಾಣದಿಂದ ಚೆನ್ನಾಗಿ ಹೊಡೆದ. ಇದರಿಂದ ಘಾಸಿಗೊಂಡವರಾದ ಅಶ್ವತ್ಥಾಮರು, ಧ್ವಜವನ್ನು ಆಶ್ರಯಿಸಿದವರಾದರೂ, ಕೂಡಲೇ ಚೇತರಿಸಿಕೊಂಡರು.  

 

ಉತ್ಥಾಯ ಬಾಣಂ ಯಮದಣ್ಡಕಲ್ಪಂ ಸನ್ಧಾಯ ಚಾಪೇ ಪ್ರವಿಕೃಷ್ಯ ರಾಕ್ಷಸೇ ।

ಮುಮೋಚ ತೇನಾಭಿಹತಃ ಪಪಾತ ವಿನಷ್ಟಸಙ್ಜ್ಞಃ ಸ್ವರಥೇ ಘಟೋತ್ಕಚಃ ॥೨೬.೨೪೪ ॥

 

ಸ್ವಲ್ಪ ಕಾಲದ ನಂತರ ಅಶ್ವತ್ಥಾಮಾಚಾರ್ಯರು ಯಮದಂಡದಂತೆ ಇರುವ ಬಾಣವನ್ನು ಬಿಲ್ಲಿನಲ್ಲಿ ಹೂಡಿ, ಗಟ್ಟಿಯಾಗಿ ಸೆಳೆದು ಘಟೋತ್ಕಚನಲ್ಲಿ ಬಿಟ್ಟರು. ಆ ಬಾಣದಿಂದ ಹೊಡೆಯಲ್ಪಟ್ಟವನಾದ ಘಟೋತ್ಕಚನು ತನ್ನ ರಥದಲ್ಲಿ ಮೂರ್ಛಿತನಾಗಿ ಬಿದ್ದ.

 

ವಿಮೂರ್ಚ್ಛಿತಂ  ಸಾರಥಿರಸ್ಯ ದೂರಂ ನಿನಾಯ ಯುದ್ಧಾಜ್ಜಗತೋ ವಿಪಶ್ಯತಃ ।

ದ್ರೌಣಿಶ್ಚ ಸೇನಾಂ  ನಿಶಿತೈಃ ಶರೋತ್ತಮೈರ್ವ್ಯದ್ರಾವಯತ್ ಪಾಣ್ಡವಸೋಮಕಾನಾಮ್ ॥೨೬.೨೪೫ ॥

 

ಹೀಗೆ ಮೂರ್ಛಿತಾನಾಗಿ ಬಿದ್ದ ಘಟೋತ್ಕಚನನ್ನು ಅವನ ಸಾರಥಿಯು ಎಲ್ಲರೂ ನೋಡುತ್ತಿರುವಾಗಲೇ ಯುದ್ಧದಿಂದ ದೂರಕ್ಕೆ ಕೊಂಡೊಯ್ದನು. ಇತ್ತ ಅಶ್ವತ್ಥಾಮರು ಚೂಪಾಗಿರುವ ಬಾಣಗಳಿಂದ ಪಾಂಡವರ ಹಾಗೂ ಪಾಂಚಾಲರ ಸೇನೆಯನ್ನು ಓಡಿಸಿದರು.

 

ಸಙ್ಜ್ಞಾಮವಾಪ್ಯಾಥ ಘಟೋತ್ಕಚೋSಪಿ ಕ್ರುದ್ಧೋSವಿಶತ್  ಕೌರವಸೈನ್ಯಮಾಶು ।

ವಿದ್ರಾವಯಾಮಾಸ  ಸ ಬಾಣವರ್ಷೈಃ ಪ್ರಕಮ್ಪಯಾಮಾಸ ಮಹಾರಥಾಂಸ್ತಥಾ ॥೨೬.೨೪೬ ॥

 

ಸ್ವಲಹೊತ್ತಿನ ಬಳಿಕ ಘಟೋತ್ಕಚನೂ ಕೂಡಾ ಚೇತರಿಸಿಕೊಂಡು, ಮುನಿದು, ಕೌರವರ ಸೇನೆಯನ್ನು ಪ್ರವೇಶಿಸಿದನು. ಅವನು ಮಹಾರಥರನ್ನು ಬಾಣಗಳ ಮಳೆಗಳಿಂದ ಕಂಗೆಡಿಸಿದನು ಮತ್ತು ಓಡಿಸಿದ ಕೂಡಾ. 

No comments:

Post a Comment