ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 19, 2023

Mahabharata Tatparya Nirnaya Kannada 26-301-311

 

ಅದಹ್ಯಮಾನೇ ಭೀಮೇSಪಿ ವಹ್ನೌ ವಹ್ನಿರಿವ ಸ್ಥಿತೇ ।

ಅವೇಷ್ಟಯದ್ ವಾರುಣೇನ ಪಾರ್ತ್ಥೋSತ್ರಾSತ್ಮಪ್ರಪತ್ತಯೇ ॥೨೬.೩೦೧ ॥

 

ನ ದೇಹೇ ಪತಿತಾಸ್ತ್ರಸ್ಯ ಬಹಿರ್ವೇಷ್ಟನತಃ ಫಲಮ್ ।

ತಥಾSಪಿ ಸ್ನೇಹವಶಗೋ ವೇಷ್ಟಯಾಮಾಸ ಫಲ್ಗುನಃ ॥೨೬.೩೦೨ ॥

 

ಭೀಮಸೇನನು ನಾರಾಯಣಾಸ್ತ್ರದಿಂದ ಸುಡಲ್ಪಡದೇ ಇರಲು, ಅರ್ಜುನನು ಭೀಮನ ಮೇಲಿನ  ಪ್ರೀತಿಯಿಂದ ವರುಣಾಸ್ತ್ರವನ್ನು ಬಿಟ್ಟು ಆವರಣ ಮಾಡಿದ. ದೇಹದಲ್ಲಿಯೇ ಅಸ್ತ್ರ ಬಿದ್ದಾಗ ಹೊರಗಿನಿಂದ ಆವರಣ ಮಾಡಿದರೆ ಏನೂ ಫಲವಿಲ್ಲ. ಆದರೂ ಕೂಡಾ ಭೀಮನ ಮೇಲಿನ ಭಕ್ತಿಯಿಂದ ಅರ್ಜುನ ವಾರುಣಾಸ್ತ್ರವನ್ನು ಬಿಟ್ಟ.

 

ಅಮೋಘತ್ವಂ ನಿಜಾಸ್ತ್ರಸ್ಯ ಭೀಮಸ್ಯಾವದ್ಧ್ಯತಾಮಪಿ ।

ಸಾಧಯನ್ ಸಾರ್ಜ್ಜುನಃ ಕೃಷ್ಣೋ ಭೀಮಸ್ಯ ರಥಮಾರುಹತ್ ॥೨೬.೩೦೩ ॥

 

ನಾರಾಯಣಾಸ್ತ್ರದ ವ್ಯರ್ಥವಾಗದಿರುವಿಕೆ ಹಾಗೂ ಭೀಮಸೇನನ ಅವಧ್ಯತ್ವವನ್ನು ಸಾಧಿಸುತ್ತಾ,  ಅರ್ಜುನನ ಸಮೇತನಾದ ಶ್ರೀಕೃಷ್ಣನು ಭೀಮನ ರಥವನ್ನೆರಿದನು.

 

[ಅರ್ಜುನ ಹೇಗೆ ಭೀಮನ ರಥವನ್ನೇರಲು ಸಮರ್ಥನಾದ? ಹೇಗೆ ಅವನು ಸುಟ್ಟು ಹೋಗಲಿಲ್ಲ  ಎಂದರೆ-]

 

ವೇಷ್ಟಿತಂ ವಾರುಣಾಸ್ತ್ರೇಣ ಪ್ರವಿಷ್ಟಂ ಬಾಹ್ಯತಸ್ತದಾ ।

ಸಹಿತತ್ವಾತ್ ಕೇಶವೇನ ನರತ್ವಾದಥ ಫಲ್ಗುನಮ್ ॥೨೬.೩೦೪ ॥

 

ವರುಣಾಸ್ತ್ರದಿಂದ ಸುತ್ತುವರಿಯಲ್ಪಟ್ಟಿರುವುದರಿಂದ, ಹೊರಗಿನಿಂದ ಪ್ರವೇಶಿಸಿರುವುದರಿಂದ, ಕೃಷ್ಣನಿಂದ ಕೂಡಿರುವುದರಿಂದ ಮತ್ತು ನರನ ಆವೇಶ ವಿಶೇಷವಾಗಿ ಇರುವುದರಿಂದ ಆ ಬೆಂಕಿ ಅರ್ಜುನನನ್ನು ಸುಡಲಿಲ್ಲ..

[ನ್ಯಸ್ತಶಸ್ತ್ರೌ ತತಸ್ತೌ ತು ನಾದಹತ್ ಸೋSಸ್ತ್ರಜೋSನಲಃ । ವಾರುಣಾಸ್ತ್ರಪ್ರಯೋಗಾಚ್ಚ ವೀರ್ಯವತ್ತ್ವಾಚ್ಚ ಕೃಷ್ಣಯೋಃ’ (೨೦೧.೧೩) - ಆ ಅಸ್ತ್ರದಿಂದ ಹುಟ್ಟಿದ್ದ ಅಗ್ನಿಯು ವಾರುಣಾಸ್ತ್ರ ಪ್ರಯೋಗದಿಂದಲೂ, ಕೃಷ್ಣನ ವೀರ್ಯದಿಂದಲೂ ಅರ್ಜುನನನ್ನು ಸುಡಲಿಲ್ಲ]

 

ತದಸ್ತ್ರಂ ನಾದಹತ್ ತಾಭ್ಯಾಂ ಸ್ವರಥಾದವರೋಪಿತೇ ।

ಭೀಮ ಆಚ್ಛಿನ್ನಹೇತೌ ಚ ತದಸ್ತ್ರಂ ಶಾನ್ತಿಮಾಗಮತ್ ॥೨೬.೩೦೫ ॥

 

ಕೃಷ್ಣಾರ್ಜುನರಿಂದ ಭೀಮಸೇನನು ಬಲಾತ್ಕಾರದಿಂದ ಬಿಡಿಸಲ್ಪಟ್ಟ ಆಯುಧವುಳ್ಳವನಾಗಿ ರಥದಿಂದ ಇಳಿಸಲ್ಪಡುತ್ತಿರಲು, ಆ ಅಸ್ತ್ರವು ಶಾಂತವಾಯಿತು.  

 

ಶುದ್ಧಕ್ಷತ್ರಿಯಧರ್ಮ್ಮೇಷು ನಿರತತ್ವಾದ್ ವೃಕೋದರಃ ।

ವಾಹನಾದವತೀರ್ಯ್ಯಾನ್ಯೈಃ ಪ್ರಣತೇSಪಿ ನಿರಾಯುಧೈಃ ।

ಸಾಯುಧಃ ಸರಥೋSಯುದ್ಧ್ಯದವಿಷಹ್ಯಮಪೀಶ್ವರೈಃ ॥೨೬.೩೦೬ ॥

 

ಇತರರು ತಮ್ಮ ರಥಾದಿವಾಹನಗಳಿಂದ ಕೆಳಗಿಳಿದು, ಆಯುಧ ರಹಿತರಾಗಿ ಅಸ್ತ್ರಕ್ಕೆ ನಮಿಸಿದರೂ ಕೂಡಾ, ಭೀಮ ಮಾತ್ರ  ಶುದ್ಧ ಕ್ಷತ್ರಿಯ ಧರ್ಮದಲ್ಲಿ ನಿರತನಾದ್ದರಿಂದ ಆಯುಧ ಸಹಿತನಾಗಿ, ರಥ ಸಹಿತನಾಗಿ, ಅತ್ಯಂತ ಶಕ್ತಿಶಾಲಿಯಾದ, ದೇವತೆಗಳೂ ಎದುರಿಸಲಾರದ ಅಸ್ತ್ರದ ಮುಂದೆ ಯುದ್ಧ ಮಾಡಿದನು.

 

ಸ್ವಧರ್ಮ್ಮಹಾನೌ ಮಿತ್ರಾಣಾಂ ಕರ್ತ್ತವ್ಯಂ ಯನ್ನಿಷೇಧನಮ್ ।

ಅತಃ ಸೋSನ್ಯಾನಪಿ ಪ್ರಾಹ ಮಾ ಗಮಧ್ವಮಿತಿ ಸ್ವಯಮ್ ॥೨೬.೩೦೭ ॥

 

ಸ್ವಧರ್ಮಕ್ಕೆ ಧಕ್ಕೆಯಾಗುವ ಪರಿಸ್ಥಿತಿ ಎದುರಾದಾಗ ಸ್ನೇಹಿತರಿಗೂ ಕೂಡಾ ಕರ್ತವ್ಯ ಉಲ್ಲಂಘಿಸದಂತೆ ಹೇಳತಕ್ಕದ್ದು. ಆದ್ದರಿಂದ, ಭೀಮನು ಇತರರಿಗೂ ಕೂಡಾ ಅಸ್ತ್ರಕ್ಕೆ ತಲೆಬಾಗದೇ ಹೋರಾಡಿ ಎಂದು ಹೇಳಿದ್ದನು.

 

[ಭೀಮ ಏಕೆ ಹೀಗೆ ಮಾಡಿದ? ನಾರಾಯಣಾಸ್ತ್ರ ನಮಸ್ಕಾರ ಯೋಗ್ಯವಾಗಿತ್ತಲ್ಲವೇ ಎಂದರೆ-]

 

ನಮಸ್ಕಾರ್ಯ್ಯಮಪಿ ಹ್ಯಸ್ತ್ರಂ ನ ನಮ್ಯಂ ಜೀವನೇಚ್ಛಯಾ ।

ಸಮರೇ ಶತ್ರುಣಾ ಮುಕ್ತಂ ತಸ್ಮಾತ್ ತನ್ನ ಚಕಾರ ಸಃ ॥೨೬.೩೦೮ ॥

 

ಆ ಅಸ್ತ್ರವು ಎಲ್ಲರಿಗೂ ನಮಸ್ಕಾರಕ್ಕೆ ಯೋಗ್ಯವಾದುದಾದರೂ ಕೂಡಾ, ಅದು ಯುದ್ಧದಲ್ಲಿ ಶತ್ರು ಬಿಟ್ಟ ಅಸ್ತ್ರವಾಗಿರುವುದರಿಂದ, ಜೀವದ ಬಯಕೆಗಾಗಿ ಯಾವ ಕಾರಣದಿಂದ ನಮಸ್ಕರಿಸಲು ಯೋಗ್ಯವಲ್ಲವೋ. ಹಾಗಾಗಿ ಭೀಮಸೇನ ನಮಸ್ಕಾರ ಮಾಡಲಿಲ್ಲ.

 

ಅಸ್ತ್ರಾಭಿಮಾನೀ ವಾಯುರ್ಹಿ ದೇವತಾSಸ್ಯ ಹರಿಃ ಸ್ವಯಮ್ ।

ತಸ್ಮಾದ್ ಭೀಮಂ ಸ್ವರೂಪತ್ವಾನ್ನಾದಹಚ್ಚಾಗ್ನಿಮಗ್ನಿವತ್ ॥೨೬.೩೦೯ ॥

 

ವಾಯುದೇವರೇ ಅಸ್ತ್ರಕ್ಕೆ ಅಭಿಮಾನಿಯು. ಸ್ವಯಂ ಶ್ರೀಹರಿ ಅಸ್ತ್ರದ ದೇವತೆ. ಆದ್ದರಿಂದ ಅಸ್ತ್ರವು ಭೀಮನ  ಸ್ವರೂಪವೇ ಆಗಿರುವುದರಿಂದ, ಅಗ್ನಿಯನ್ನು ಅಗ್ನಿಯು ಸುಡಲಿಲ್ಲ.

 

ಮನಸೈವಾSದರಂ ಚಕ್ರೇ ಭೀಮೋSಸ್ತ್ರೇ ಚ ಹರೌ ತದಾ ।

ಕ್ಷತ್ರಧರ್ಮ್ಮಾನುಸಾರೇಣ ನ ನನಾಮ ಚ ಬಾಹ್ಯತಃ ॥೨೬.೩೧೦ ॥

 

ಭೀಮಸೇನನು ಅಸ್ತ್ರದಲ್ಲಿಯೂ, ಅಸ್ತ್ರದ ದೇವತೆಯಾಗಿರುವ ನಾರಾಯಣನಲ್ಲಿಯೂ ಮನಸ್ಸಿನಿಂದ ನಮಸ್ಕಾರ ಮಾಡಿದನು. ಕ್ಷತ್ರಿಯ ಧರ್ಮವನ್ನು ಅನುಸರಿಸಿಯೇ ಬಾಹ್ಯವಾಗಿ ನಮಸ್ಕಾರ ಮಾಡಲಿಲ್ಲ.

 

ವಾಸುದೇವ ಸ್ವಕೀಯಾಸ್ತ್ರಂ ಭೀಮಂ ಚಾಮೋಘಮೇವ ತು ।

ಸಾಧಯಿತ್ವಾSನನ್ತಶಕ್ತಿಃ ಪುನರಶ್ವಾನಚೋದಯತ್ ॥೨೬.೩೧೧ ॥

 

ಅನಂತ ಶಕ್ತಿಯುಳ್ಳ ಶ್ರೀಕೃಷ್ಣನು ತನ್ನ ಅಸ್ತ್ರವು ಅಮೋಘವೆಂದೂ, ಭೀಮಸೇನನೂ ಅಮೋಘನೆಂದು,  ಎರಡೂ ರೀತಿಯಾಗಿ ಸಾಧಿಸಿ ಮತ್ತೆ ತನ್ನ ರಥವನ್ನೆರಿದ.

No comments:

Post a Comment