ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 18, 2023

Mahabharata Tatparya Nirnaya Kannada 26-274-280

 

[ಹದಿನಾಲ್ಕನೇ ದಿನದ ರಾತ್ರಿ ಯುದ್ಧ ಮುಗಿದು, ಬೆಳಗಾಗಿ-ಹದಿನೈದನೇ ದಿನದ ಯುದ್ಧ ಪ್ರಾರಂಭವಾಯಿತು]

 

ತತಃ ಸೂರ್ಯ್ಯಶ್ಚಾಭ್ಯುದಿತಸ್ತದಾSತಿಘೋರಂ ದ್ರೋಣಃ ಕರ್ಮ್ಮ ಯುದ್ಧೇ ಚಕಾರ ।

ಸ ಪಾಞ್ಚಾಲಾನಾಂ ರಥವೃನ್ದಂ ಪ್ರವಿಶ್ಯ ಜಘಾನ ಹಸ್ತ್ಯಶ್ವರಥಾನ್ ನರಾಂಶ್ಚ ॥೨೬.೨೭೪ ॥

 

ತದನಂತರ ಬೆಳಗಾಗಲು(ಸೂರ್ಯೋದಯಾನಂತರ) ದ್ರೋಣಾಚಾರ್ಯರು ಯುದ್ಧದಲ್ಲಿ ಅತ್ಯಂತ ಘೋರಕರ್ಮ ಮಾಡಿದರು. ಅವರು ಪಾಂಚಾಲರ ರಥದ ಸಮೂಹವನ್ನು ಹೊಕ್ಕು, ಆನೆ, ಕುದುರೆ, ರಥ, ಕಾಲಾಳುಗಳಿಂದ ಕೂಡಿದ ಸೈನ್ಯವನ್ನು (ಚತುರಂಗ ಸೇನೆಯನ್ನು) ಕೊಂದು ಹಾಕಿದರು.

 

ವಿದ್ರಾವಿತಾಸ್ತೇನ  ಮಹಾರಥಾಶ್ಚ ನೈವಾವಿನ್ದಞ್ಛರ್ಮ್ಮ ಬಾಣಾನ್ಧಕಾರೇ ।

ಯುವೇವ ವೃದ್ಧೋSಪಿ ಚಚಾರ ಯುದ್ಧೇ  ಸ ಉಗ್ರಧನ್ವಾ ಪರಮಾಸ್ತ್ರವೇತ್ತಾ ॥೨೬.೨೭೫ ॥

 

ದ್ರೋಣಾಚಾರ್ಯರಿಂದ ಓಡಿಸಲ್ಪಟ್ಟ ಮಹಾರಥಿಕರೂ  ಎಲ್ಲೆಡೆ ತುಂಬಿದ ಬಾಣಗಳಿಂದ ಮಾಡಲ್ಪಟ್ಟ ಅಂಧಕಾರದಲ್ಲಿ ಸುಖವನ್ನು ಹೊಂದಲಿಲ್ಲ. ವೃದ್ಧನಾದರೂ ಯುವಕನೋ ಎಂಬಂತೆ ಯುದ್ಧದಲ್ಲಿ ಉಗ್ರವಾದ ಧನುಸ್ಸುಳ್ಳವರಾಗಿ ಮಹಾಸ್ತ್ರವನ್ನು ಪ್ರಯೋಗ ಮಾಡುತ್ತಾ ದ್ರೋಣಾಚಾರ್ಯರು ಸಂಚರಿಸಿದರು.

 

ರಥಾರ್ಬುದಂ ತೇನ ಹತಂ ಚ ತತ್ರ ತತಃ ಸಹಸ್ರಂ  ಗುಣಿತಂ ನರಾಣಾಮ್ ।

ತತೋ ದಶಾಂಶೋ ನಿಹತೋ ಹಯಾನಾಂ ಗಜಾರ್ಬುದಂ ಚೈವ ರಣೋತ್ಕಟೇನ ॥೨೬.೨೭೬ ॥

 

ಆ ಯುದ್ಧದಲ್ಲಿ ವಿಪರೀತವಾಗಿ ತೊಡಗಿಕೊಂಡ ದ್ರೋಣಾಚಾರ್ಯರು,  ಹತ್ತುಸಾವಿರ ರಥಿಕರನ್ನೂ,  ಹತ್ತು ಸಾವಿರದ ಹತ್ತು ಪಟ್ಟು ಪದಾತಿಗಳನ್ನೂ, ಹತ್ತು ಸಾವಿರ ಕುದುರೆಗಳನ್ನೂ,  ಹತ್ತು ಸಾವಿರ ಆನೆಗಳನ್ನೂ ಕೊಂದು ಹಾಕಿದರು.

 

ತಥಾ ವಿರಾಟದ್ರುಪದೌ ಶರಾಭ್ಯಾಂ ನಿನಾಯ ಲೋಕಂ ಪರಮಾಜಿಮದ್ಧ್ಯೇ ।

ತತೋ ವಿಜಿತ್ಯೈವ  ಗುರೋಃ ಸುತಾದೀನ್ ಧೃಷ್ಟದ್ಯುಮ್ನಂ ಭೀಮಸೇನೋ ಜುಗೋಪ ॥೨೬.೨೭೭ ॥

 

ಹಾಗೆಯೇ ದ್ರೋಣಾಚಾರ್ಯರು ಒಂದೊಂದು ಬಾಣದಿಂದ ವಿರಾಟ ಹಾಗೂ ದ್ರುಪದರನ್ನು  ಯಮಲೋಕಕ್ಕೆ ಕಳುಹಿಸಿದರು. ಆನಂತರ ಗುರುಪುತ್ರ ಅಶ್ವತ್ಥಾಮ ಮತ್ತು ಇತರರನ್ನು ಗೆದ್ದ ಭೀಮಸೇನ ಧೃಷ್ಟದ್ಯುಮ್ನನನ್ನು ರಕ್ಷಿಸುವುದರಲ್ಲಿ ತೊಡಗಿಕೊಂಡ.

 

ಧೃಷ್ಟದ್ಯುಮ್ನೋ ಭೀಮಸೇನಾಭಿಗುಪ್ತೋ ದ್ರೋಣಂ ಹನ್ತುಂ ಯತ್ನಮುಚ್ಚೈಶ್ಚಕಾರ ।

ನಿವಾರಯಾಮಾಸ ಗುರುಃ ಶರೌಘೈರ್ಧೃಷ್ಟದ್ಯುಮ್ನಂ ಸೋSಪಿ ತಂ ಸಾಯಕೇನ ।

ವಿವ್ಯಾಧ ತೇನಾಭಿಹತಃ ಸ ಮೂರ್ಚ್ಛಾಮವಾಪ ವಿಪ್ರೋ ನಿಷಸಾದ ಚಾSಶು ॥೨೬.೨೭೮ ॥

 

ಭೀಮಸೇನನ ಬೆಂಬಲದಿಂದ ಧೃಷ್ಟದ್ಯುಮ್ನನು ದ್ರೋಣಾಚಾರ್ಯರನ್ನು ಕೊಲ್ಲಲು ಬಹಳ ಪ್ರಯತ್ನ ಮಾಡಿದ. ದ್ರೋಣಾಚಾರ್ಯರು ಬಾಣಗಳ ಸಮೂಹದಿಂದ ಧೃಷ್ಟದ್ಯುಮ್ನನನ್ನು ತಡೆದರು. ಧೃಷ್ಟದ್ಯುಮ್ನನೂ ಕೂಡಾ ದ್ರೋಣಾಚಾರ್ಯರನ್ನು ಬಾಣದಿಂದ ಹೊಡೆದ.  ಅದರಿಂದ ಗಾಢವಾಗಿ ಹೊಡೆಯಲ್ಪಟ್ಟ ದ್ರೋಣಾಚಾರ್ಯರು ಮೂರ್ಛೆಯನ್ನು ಹೊಂದಿ, ಕುಕ್ಕರಿಸಿ ಬಿದ್ದರು. 

 

ಧೃಷ್ಟದ್ಯುಮ್ನಃ ಸತ್ವರಂ ಖಡ್ಗಚರ್ಮ್ಮಣೀ ಆದಾಯ ತಸ್ಯಾSರುರುಹೇ ರಥೋತ್ತಮಮ್ ।

ಸಞ್ಜ್ಞಾಮವಾಪ್ಯಾಥ ಗುರುಃ ಶರೌಘೈಃ ಪ್ರಾದೇಶಮಾತ್ರೈರ್ವ್ಯಥಯಾಮಾಸ ತಂ ಚ ॥೨೬.೨೭೯ ॥

 

ಆಗ ಧೃಷ್ಟದ್ಯುಮ್ನನು ವೇಗದಲ್ಲಿ ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡು ತನ್ನ ರಥದಿಂದಿಳಿದು, ದ್ರೋಣಾಚಾರ್ಯರ ರಥವನ್ನೇರಿದನು. ಆ ಸಮಯದಲ್ಲಿ ದ್ರೋಣಾಚಾರ್ಯರು ಎಚ್ಚೆತ್ತು, ಒಂದು ಅಂಗುಲವಿರುವ ಬಾಣಗಳಿಂದ ಅವನನ್ನು ಚುಚ್ಚಿ ಓಡಿಸಿದರು.

 

ಸ ತೈರತಿವ್ಯಥಿತಸ್ತದ್ರಥಾಚ್ಚ ಪರಾವೃತ್ತಃ ಸ್ವಂ ರಥಮಾರುರೋಹ ।

ಸುಸಂರಬ್ಧೌ ತೌ ಪುನರೇವ ಯುದ್ಧಂ ಸಞ್ಚಕ್ರತುರ್ವೃಷ್ಟಶರಾಮ್ಬುಧಾರೌ ॥೨೬.೨೮೦ ॥

 

ಧೃಷ್ಟದ್ಯುಮ್ನನು ಆ ಬಾಣಗಳಿಂದ ಗಾಯಗೊಂಡು ದ್ರೋಣಾಚಾರ್ಯರ ರಥದಿಂದ ಇಳಿದು, ತನ್ನ ರಥವನ್ನೆರಿದ. ಮತ್ತೆ ಸಿಟ್ಟುಗೊಂಡ ಅವರಿಬ್ಬರೂ  ಶರಧಾರೆಯೊಂದಿಗೆ ಯುದ್ಧವನ್ನಾರಂಭಿಸಿದರು.

No comments:

Post a Comment