ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, August 7, 2020

Mahabharata Tatparya Nirnaya Kannada 17235_17242

 

ಪ್ರಯಾಹಿ ಸಾತ್ಯಕೇ ವಚೋ ಬ್ರವೀಹಿ ಮೇ ನೃಪಾಧಮೌ ।

ಸಮೇತ್ಯ ವಾಂ ವರಾಯುಧೈಃ ಕರಂ ದದಾನ್ಯಸಂಶಯಮ್ ॥೧೭.೨೩೫॥

 

‘ಓ ಸಾತ್ಯಕಿಯೇ, ತೆರಳು, ಆ ರಾಜಾಧಮರನ್ನು ಕುರಿತು ನನ್ನ ಈ ಮಾತನ್ನು ಹೇಳು: ‘ನಿಮ್ಮಿಬ್ಬರನ್ನು ಹೊಂದಿ ಆಯುಧಗಳಿಂದ ಕಪ್ಪವನ್ನು ಕೊಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ.

 

ಉಪೈತಮಾಶು ಸಂಯುಗಾರ್ತ್ಥಿನೌ ಚ ಪುಷ್ಕರಂ ಪ್ರತಿ ।

ಇತೀರಿತಃ ಶಿನೇಃ ಸುತೋ ಜಗಾಮ ವಿಪ್ರಸಂಯುತಃ ॥೧೭.೨೩೬॥

 

ಯುದ್ಧವನ್ನು ಬಯಸುವ ನೀವಿಬ್ಬರು ಪುಷ್ಕರವನ್ನು ಕುರಿತು ಶೀಘ್ರದಲ್ಲಿ ಬನ್ನಿರಿ’ ಎಂದು ಹೇಳು’ ಎಂದು ಶ್ರೀಕೃಷ್ಣನಿಂದ  ಹೇಳಲ್ಪಟ್ಟ ಶಿನಿಯ ಮೊಮ್ಮಗನಾದ ಸಾತ್ಯಕಿಯು ಆ ಬ್ರಾಹ್ಮಣನ ಜೊತೆಗೇ ತೆರಳಿದನು.

 

ಉಪೇತ್ಯ ತೌ ಹರೇರ್ವಚೋ ಜಗಾದ ಸಾತ್ಯಕಿರ್ಬಲೀ ।

ವಿಧಾಯ ತೌ ತೃಣೋಪಮೌ ಗಿರಾ ಜಗಾಮ ಕೇಶವಮ್ ॥೧೭.೨೩೭॥

 

ಹಂಸ-ಡಿಭಕರಲ್ಲಿಗೆ ತೆರಳಿದ ಬಲಿಷ್ಠನಾದ ಸಾತ್ಯಕಿಯು ಪರಮಾತ್ಮನ ಮಾತನ್ನು ಅವರಿಗೆ ಹೇಳಿದನು. ಅವರಿಬ್ಬರನ್ನೂ ತನ್ನ ಮಾತಿನಿಂದಲೇ ಹುಲ್ಲಿಗೆ ಸಮಾನರನ್ನಾಗಿ ಮಾಡಿದ ಸಾತ್ಯಕಿ, ಮರಳಿ ಪರಮಾತ್ಮನ ಬಳಿ ಬಂದ.

 

ತತಃ ಪುರೈವ ತಾವುಭೌ ದ್ವಿಜಂ ಹರಸ್ವರೂಪಿಣಮ್ ।

ಸುದುಃಖವಾಸನಾಮಕಂ ಪ್ರಚಕ್ರತುಸ್ತೃಣೋಪಮಮ್ ॥೧೭.೨೩೮॥

 

ಈ ಘಟನೆಗೂ ಮೊದಲೇ ಒಮ್ಮೆ ಹಂಸ-ಡಿಭಕರು, ರುದ್ರನ ಸ್ವರೂಪವಾಗಿರುವ, ಸುದುಃಖವಾಸ(ದುರ್ವಾಸ) ಎಂದು ಹೆಸರುಳ್ಳ ಮುನಿಯನ್ನು  ಹುಲ್ಲಿಗಿಂತ ಕಡೆಯಾಗಿ ನಡೆಸಿಕೊಂಡರು.

 

ದಶತ್ರಿಕೈಃ ಶತೈರ್ವೃತೋ ಯತೀಶ್ವರೈಃ ಸ ಸರ್ವವಿತ್ ।

ವಿಪಾಟಿತಾತ್ಮಕೌಪಿನಾದಿಸರ್ವಮಾತ್ರಕೋsಭವತ್ ॥೧೭.೨೩೯॥

 

ದುರ್ವಾಸರ ಹಾಗೂ ಅವರ ಜೊತೆಗಿದ್ದ ಸುಮಾರು ಮೂರುಸಾವಿರ ಯತೀಶ್ವರರ  ಕೌಪೀನವನ್ನು ಹರಿದ ಹಂಸ-ಡಿಭಕರು, ಅವರ  ದಂಡ-ಕಮಂಡಲಾದಿ ಪಾತ್ರೆಗಳನ್ನು ಒಡೆದು ಹಾಕಿದರು.

 

[ಈರೀತಿ ಅವಮಾನಕ್ಕೊಳಪಟ್ಟರೂ ಕೂಡಾ ದುರ್ವಾಸರು ಹಂಸ-ಡಿಭಕರಿಗೆ ಏಕೆ ಶಾಪ ಕೊಡಲಿಲ್ಲಾ ಎಂದರೆ: ]

 

ವರಾತ್ ಸ್ವಸಮ್ಭವಾದಸೌ ನ ಶಾಪಶಕ್ತಿಮಾನಭೂತ್ ।

ತತಃ ಸಮಸ್ತಭಞ್ಜನೋರುಶಕ್ತಿಮಾಪ ಕೇಶವಮ್ ॥೧೭.೨೪೦॥

 

ಸ್ವಯಂ ರುದ್ರರೂಪದಿಂದ ತಾನೇ ಹಂಸ-ಡಿಭಕರಿಗೆ ವರವನ್ನು ಕೊಟ್ಟದ್ದರಿಂದ, ದುರ್ವಾಸರಿಗೆ ಇಲ್ಲಿ  ಶಾಪಕೊಡಲಾಗಲಿಲ್ಲ. ಆ ಕಾರಣದಿಂದ ಅವರು  ಸಮಸ್ತ ದುರ್ಜನರನ್ನೂ ಕೊಲ್ಲುವುದರಲ್ಲಿ ಉತ್ಕೃಷ್ಟ ಶಕ್ತಿಯುಳ್ಳ ಕೇಶವನನ್ನು(ಶ್ರೀಕೃಷ್ಣನನ್ನು) ಹೊಂದಿದರು.

 

ಸ ತಾನ್ ಸಮರ್ಚ್ಚ್ಯ ಮಾಧವಃ ಪ್ರದಾಯ ಚೋರುಮಾತ್ರಕಾಃ ।

ಯಯೌ ಚ ತೈಃ ಸಮನ್ವಿತೋ ವಧಾಯ ಸಾಲ್ವಪುತ್ರಯೋಃ ॥೧೭.೨೪೧॥

 

ತನ್ನಲ್ಲಿಗೆ ಬಂದ ಸಮಸ್ತ ಯತೀಶ್ವರರನ್ನು ಗೌರವಿಸಿ, ಉತ್ಕೃಷ್ಟವಾದ ಬಟ್ಟೆ ಮೊದಲಾದವುಗಳನ್ನು ಕೊಟ್ಟು ಸತ್ಕರಿಸಿದ ಶ್ರೀಕೃಷ್ಣನು, ಸಾಲ್ವ ಪುತ್ರರ ವಧೆಗಾಗಿ, ಆ ಯತಿಶ್ರೇಷ್ಠರೊಡಗೂಡಿ ತೆರಳಿದನು.

 

[ಹರಿವಂಶದಲ್ಲಿ ಈ ಕುರಿತಾದ ವಿವರಣೆಯನ್ನು ಸ್ವಲ್ಪ ವ್ಯತ್ಯಾಸದೊಂದಿಗೆ ಈ ರೀತಿ ಹೇಳಿರುವುದನ್ನು ನಾವು ಕಾಣುತ್ತೇವೆ: ಛಿನ್ನಂ ತಾಭ್ಯಾಂ ಸಮಾದಾಯ ಶಿಕ್ಯಂ ದಾರುಮಯಂ  ತಥಾ । ದ್ವಿದಲಂ ಕರ್ಪಟಂ ಚೈವ ಕೌಪೀನಮಥ ವಲ್ಕಲಂ । ಕಮನ್ಡಲುಂ  ತದಾ ರಾಜನ್ನರ್ಧಪ್ರೋತಕಪಾಲಕಮ್ ।  ಏತಾನನ್ಯಾನ್ ಸಮಾದಾಯ  ದ್ರುಷ್ಟುಂ  ಕೇಶವಮಾಯಯುಃ ।  ಪಂಚ[1] ಚೈವ ಸಹಸ್ರಾಣಿ ಪುರಸ್ಕೃತ್ಯ ಮಹಾಮುನಿಮ್ ದುರ್ವಾಸಸಂ ತಪೋಯೋನಿಮೀಶ್ವರಸ್ಯಾsತ್ಮಸಮ್ಭವಮ್’ [ಭವಿಷ್ಯತ್ ಪರ್ವಣಿ ೧೧೦.೧೨-೧೪]  (ಒಡೆದುಹೋದ ಮರದ ಪಾತ್ರೆಗಳು, ಹರಿದುಹೋದ ಕೌಪೀನ ಎಲ್ಲವನ್ನೂ ಸಾಕ್ಷೀಭೂತವಾಗಿ ತೆಗೆದುಕೊಂಡ ದುರ್ವಾಸರು, ಶ್ರೀಕೃಷ್ಣನಲ್ಲಿಗೆ ತೆರಳಿದರು. ಇಲ್ಲಿ ದುರ್ವಾಸರನ್ನು ‘ಈಶ್ವರಸ್ಯಾsತ್ಮಸಮ್ಭವಮ್’ ಎಂದು ಸಂಬೋಧಿಸಿರುವುದನ್ನು ಗಮನಿಸಬೇಕು. ಇದು   ದುರ್ವಾಸರು ರುದ್ರಾವತಾರ ಎನ್ನುವುದನ್ನು ಸ್ಫುಟವಾಗಿ ತಿಳಿಸುತ್ತದೆ).

‘ಜೇಷ್ಯಾಮಿ ತೌ ರಣೇ ವಿಪ್ರ ಹಂಸಂ  ಡಿಭಕಮೇವಚ ।  ಗಿರೀಶೋ ವಾ ವರಂ  ದದ್ಯಾಚ್ಛಕ್ರೋ ವಾ  ಧನದೋsಪಿ ವಾ । ಯಮೋ ವಾ ವರುಣೋ ವಾsಪಿ  ಬ್ರಹ್ಮಾ ವಾsಥ ಚತುರ್ಮುಖಃ । ಸಬಲೌ ಸಾನುಗೌ ಹತ್ವಾ  ಪುನರ್ದಾಸ್ಯಾಮಿ  ವೋ ರತಿಮ್’ [ಭವಿಷ್ಯತ್ ಪರ್ವಣಿ ೧೧೨.೩-೪] (ನಿಮ್ಮ ಸಂತೋಷಕ್ಕಾಗಿ ನಾನು ಹಂಸ ಡಿಭಕರನ್ನು ಕೊಲ್ಲುತ್ತೇನೆ ಎಂದು ದುರ್ವಾಸರು ಹಾಗು ಇತರ ಮುನಿಗಳ ಮುಂದೆ ಶ್ರೀಕೃಷ್ಣ ಪ್ರತಿಜ್ಞೆ ಮಾಡಿದ)].

 

ತಮತ್ರಿಜಂ ಹರಾತ್ಮಕಂ ಯತೋ ಹಿ ವೇದ ಮಾಗಧಃ ।

ತತೋsತ್ಯಜತ್ ಸ್ವಶಿಷ್ಯಕೌ ನಿಶಮ್ಯ ತತ್ಪ್ರತೀಪಕೌ ॥೧೭.೨೪೨॥

 

ಜರಾಸಂಧನು ಯಾವ ಕಾರಣದಿಂದ ಅತ್ರಿ ಋಷಿಗಳ ಮಗನಾದ ದುರ್ವಾಸರನ್ನು ಸಾಕ್ಷಾತ್ ಶಿವಾ ಎಂದು ತಿಳಿದಿದ್ದಾನೋ, ಆಕಾರಣದಿಂದ, ರುದ್ರನಿಗೆ ವಿರುದ್ಧವಾಗಿ ನಡೆದುಕೊಂಡ ತನ್ನ ಶಿಷ್ಯರಾದ ಹಂಸ- ಡಿಭಕರನ್ನು ತ್ಯಜಿಸಿದ (ಈ ಕಾರಣದಿಂದ ಹಂಸ-ಡಿಭಕರ ಯುದ್ಧದಲ್ಲಿ ಜರಾಸಂಧ ಪಾಲ್ಗೊಳ್ಳಲಿಲ್ಲ.)  

 

[ಇದನ್ನು ಹರಿವಂಶದ ಭವಿಷ್ಯತ್ ಪರ್ವದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ: ‘ತತಃ ಶ್ರುತ್ವಾ ಜರಾಸನ್ಧೋ ವಿಗ್ರಹಂ ಯದುಭಿಃ[2] ಸಹ । ನಾಕರೋನ್ನೃಪ ಸಾಹಾಯ್ಯಂ  ಪಾಪಂ ಮೇ ಭವಿತೇತಿ ಹ’ (೧೨೧.೧೬). ಜರಾಸಂಧನಿಗೆ ಹಂಸ-ಡಿಭಕರು ದುರ್ವಾಸರೊಂದಿಗೆ ಜಗಳವಾಡಿದ ವಿಷಯ ತಿಳಿಯಿತು. ಅದರಿಂದಾಗಿ ತಾನು ಅವರಿಗೆ ಸಹಾಯ ಮಾಡಿದರೆ ಅದು ಪಾಪವಾಗುತ್ತದೆ ಎಂದು ತಿಳಿದ ಆತ ಸಹಾಯ ಮಾಡಲಿಲ್ಲ].



[1]ಪಂಚ ಚೈವ ಸಹಸ್ರಾಣಿ ಎನ್ನುವುದು ಈಗಿರುವ ಪಾಠ. ಆದರೆ ಆಚಾರ್ಯರ ಪ್ರಕಾರ  ತ್ರೀಣಿ ಚೈವ ಸಹಸ್ರಾಣಿ’ ಎನ್ನುವುದು ಸಾಧುಃ ಪಾಠಃ

[2] ಇಲ್ಲಿ ಮುನಿಭಿಃ ಎನ್ನುವ ಪಾಠ ಹೆಚ್ಚು ಸಮಂಜಸ ಅನಿಸುತ್ತದೆ

No comments:

Post a Comment