ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 16, 2023

Mahabharata Tatparya Nirnaya Kannada 28-126-135

 

ನಿವಾರಿತೋSಪಿ ತಾಭ್ಯಾಂ ಸಃ ಪ್ರಾದವಚ್ಛಿಭಿರಂ ಪ್ರತಿ ।

ಅನುಜಗ್ಮತುಸ್ತಾವಪಿ ತಂ ಶಿಬಿರದ್ವಾರಿ ಚೈಕ್ಷತ ॥೨೮.೧೨೬॥

 

ಉಗ್ರರೂಪಧರಂ ರುದ್ರಂ ಸ್ವಕೀಯಾಂ ತನ್ವಮೇವ ಸಃ ।

ಪರೀತಂ ವಾಸುದೇವಂ ಚ ಬಹುಕೋಟಿಸ್ವರೂಪಿಣಾ ॥೨೮.೧೨೭॥

 

ಕೃಪಾಚಾರ್ಯ ಹಾಗೂ ಕೃತವರ್ಮರಿಂದ ತಡೆಯಲ್ಪಟ್ಟರೂ ಕೂಡಾ, ಅಶ್ವತ್ಥಾಮ ಪಾಂಡವರ ಶಿಬಿರವನ್ನು ಕುರಿತು ಧಾವಿಸಿದ. ಆಗ ಅವರಿಬ್ಬರೂ ಅಸಹಾಯಕರಾಗಿ ಅಶ್ವತ್ಥಾಮನನ್ನು ಅನುಸರಿಸಿದರು. ಶಿಬಿರದ ದ್ವಾರದಲ್ಲಿ ಅಶ್ವತ್ಥಾಮ ಬಹಳ ಕೋಟಿ ರೂಪದಿಂದ ಕೂಡಿರುವ ನಾರಾಯಣನನ್ನು ಹಾಗೂ ಅವನಿಂದ ಆವೃತನಾದ  ಉಗ್ರವಾಗಿರುವ ರೂಪವನ್ನು ಧರಿಸಿರುವ ತನ್ನ ಸ್ವರೂಪಭೂತನಾದ ರುದ್ರನನ್ನೂ ಕಂಡ.

[ಅಶ್ವತ್ಥಾಮನು ಕಂಡ ಆ ವಿಚಿತ್ರ ರೂಪದ ಭಗವಂತನ ವರ್ಣನೆಯನ್ನು ಮಹಾಭಾರತದಲ್ಲಿ ಕಾಣಬಹುದು: ತತ್ರ ಭೂತಂ ಮಹಾಕಾಯಂ ಚಂದ್ರಾರ್ಕಸದೃಶದ್ಯುತಿಮ್ । ಸೋSಪಶ್ಯದ್ ದ್ವಾರಮಾವೃತ್ಯ ತಿಷ್ಠಂತಂ ರೋಮಹರ್ಷಣಮ್ ।  ವಸಾನಂ ಚರ್ಮ ವೈಯಾಘ್ರಂ ವಸಾರುಧಿರವಿಸ್ರವಮ್ । ಕೃಷ್ಣಾಜಿನೋತ್ತರಾಸಙ್ಗಂ ನಾಗಯಜ್ಞೋಪವೀತಿನಮ್’(ಮಹಾಭಾರತ ಸೌಪ್ತಿಕಪರ್ವ ೬.೩-೪), ಬದ್ಧಾಙ್ಗದಮಹಾಸರ್ಪಂ ಜ್ವಾಲಾಮಾಲಾಕುಲಾನನಮ್ । ದಂಷ್ಟ್ರಾಕರಾಳವದನಂ ವ್ಯಾದಿತಾಸ್ಯಂ ಭಯಾನಕಮ್ । ನಯನಾನಾಂ ಸಹಸ್ರೈಶ್ಚ ವಿಚಿತ್ರೈರಭಿಭೂಷಿತಮ್’ (೫-೬)  ಅಲ್ಲಿ ಅವನು ದ್ವಾರವನ್ನು ಆವರಿಸಿ ನಿಂತಿರುವ, ಚಂದ್ರ-ಸೂರ್ಯರ ಸಮಾನ ಬೆಳಗುತ್ತಿರುವ, ಮೈನವಿರೇಳಿಸುವ ಮಹಾಕಾಯದ ಭೂತವೊಂದನ್ನು ಕಂಡನು. ರಕ್ತಸುರಿಸುತ್ತಿರುವ  ವ್ಯಾಘ್ರಚರ್ಮ ತೊಟ್ಟಿರುವ, ಕೃಷ್ಣಾಜಿನವನ್ನು ತೊಟ್ಟಿರುವ, ಹಾವನ್ನೇ ಯಜ್ಞೋಪವೀತವಾಗಿ ಧರಿಸಿರುವ,  ಮಹಾಸರ್ಪಗಳೇ ತೋಳ್ಬಂದಿಗಳಾಗಿರುವ, ಮುಖದ ಸುತ್ತಲೂ ಜ್ವಾಲೆಗಳ ಮಾಲೆಯಿರುವ, ಕೋರೆದಾಡೆಗಳಿಂದ ಕೂಡಿದ್ದ ಅವನ ಕರಾಳ ಮುಖದಲ್ಲಿ ತೆರೆದ ಬಾಯಿಯು ಭಯವನ್ನುಂಟುಮಾಡುತ್ತಿತ್ತು. ಅವನು ಸಹಸ್ರಾರು ವಿಚಿತ್ರ ಕಣ್ಣುಗಳಿಂದ ವಿಭೂಷಿತನಾಗಿದ್ದನು.

ತಸ್ಯಾಸ್ಯ ನಾಸಿಕಾಭ್ಯಾಂ ಚ ಶ್ರವಣಾಭ್ಯಾಂ ಚ ಸರ್ವಶಃ । ತೇಭ್ಯಶ್ಚಾಕ್ಷಿಸಹಸ್ರೇಭ್ಯಃ ಪ್ರಾದುರಾಸನ್ಮಹಾರ್ಚಿಷಃ  । ತಥಾ ತೇಜೋಮರೀಚಿಭ್ಯಃ ಶಙ್ಖಚಕ್ರಗದಾಧರಾಃ । ಪ್ರಾದುರಾಸನ್ ಹೃಷೀಕೇಶಾಃ ಶತಶೋSಥ ಸಹಸ್ರಶಃ’ (೮-೯) ತದತ್ಯದ್ಭುತಮಾಲೋಕ್ಯ ಭೂತಂ ಲೋಕಭಯಙ್ಕರಮ್ । ದ್ರೌಣಿರವ್ಯಥಿತೋ ದಿವ್ಯೈರಸ್ತ್ರವರ್ಷೈರವಾಕಿರತ್’ (೧೦)  ಅವನ ಮೂಗಿನ ಹೊಳ್ಳೆಗಳಿಂದಲೂ, ಕಿವಿಗಳಿಂದಲೂ, ಸಹಸ್ರ ಕಣ್ಣುಗಳಿಂದಲೂ ಮತ್ತು ಎಲ್ಲೆಡೆಗಳಿಂದಲೂ ಮಹಾಜ್ವಾಲೆಗಳು ಹೊರಹೊಮ್ಮುತ್ತಿದ್ದವು. ತೇಜಸ್ಸಿನ ಕಿರಣಗಳಿಂದ ತುಂಬಿರುವ, ಶಂಖ-ಚಕ್ರ-ಗದೆಗಳನ್ನು ಧರಿಸಿದ ಸಹಸ್ರಾರು ರೂಪಗಳಿರುವ ಹೃಷೀಕೇಶನನ್ನು ಅಶ್ವತ್ಥಾಮ ಕಂಡ.  ಲೋಕಭಯಂಕರನಾದ ಆ ಅದ್ಭುತ ರೂಪವನ್ನು ನೋಡಿದ ದ್ರೌಣಿಯು ಭಯಗೊಂಡು ದಿವ್ಯಾಸ್ತ್ರದ ಮಳೆಗರೆದ.]

 

ದೃಷ್ಟ್ವೈವ ವಾಸುದೇವಂ ತಮತ್ರಸದ್  ಗೌತಮೀಸುತಃ ।

ವಾಸುದೇವಾಜ್ಞೆಯೈವಾತ್ರ ಸ್ವಾತ್ಮನಾSಪಿ ಸದಾಶಿವಃ ॥೨೮.೧೨೮॥

 

ಅಯುದ್ಧ್ಯದಗ್ರಸಚ್ಚಾSಶು ದ್ರೌಣೇಃ ಸರ್ವಾಯುಧಾನ್ಯಪಿ ।

ಅಚಿನ್ತ್ಯಾ ಹರಿಶಕ್ತಿರ್ಯ್ಯದ್ ದೃಶ್ಯನ್ತೇSತ್ಮಹನೋSಪಿ ಹಿ ॥೨೮.೧೨೯॥

 

ಅತಸ್ತಯಾ ಪ್ರೇರಿತೇನ ಸ್ವಾತ್ಮನೈವಾಖಿಲೇಷ್ವಪಿ ।

ಆಯುಧೇಷು ನಿಗೀರ್ಣ್ಣೇಷು ದ್ರೌಣಿರ್ಯ್ಯಜ್ಞಂ ತು ಮಾನಸಮ್ ।

ಚಕ್ರೇSತ್ಮಾನಂ ಪಶುಂ ಕೃತ್ವಾ ಸ್ವಾತ್ಮಸ್ಥಾಯೈವ ವಿಷ್ಣವೇ ॥೨೮.೧೩೦॥

 

ಪರಮಾತ್ಮನನ್ನು ಕಂಡೊಡನೆಯೇ ಗೌತಮಿಯ ಮಗನಾಗಿರುವ ಅಶ್ವತ್ಥಾಮನು ಭಯದಿಂದ ತತ್ತರಿಸಿದನು. ಪರಮಾತ್ಮನ ಆಜ್ಞೆಯಂತೆ ಶಿಬಿರದ್ವಾರದಲ್ಲಿದ್ದ ರುದ್ರನು ತನ್ನ ಸ್ವರೂಪಭೂತನಾದ ಅಶ್ವತ್ಥಾಮನ ಜೊತೆಗೆ ಯುದ್ಧಮಾಡಿದನು. ಅವನು ಅಶ್ವತ್ಥಾಮನ ಎಲ್ಲಾ ಆಯುಧಗಳನ್ನು ಶೀಘ್ರದಲ್ಲಿ ನುಂಗಿಬಿಟ್ಟನು.

(ಶಿವನ ಎರಡು ರೂಪಗಳು ಪರಸ್ಪರ ಯುದ್ಧ ಮಾಡಲು ಸಾಧ್ಯವೇ ಎಂದರೆ ಹೇಳುತ್ತಾರೆ-) ಶ್ರೀಹರಿಯ ಶಕ್ತಿಯು ಅಚಿಂತ್ಯ. ಆ ಶಕ್ತಿಯ ಪ್ರೇರಣೆಯಿಂದ ಹೇಗೆ  ತಮ್ಮನ್ನು ತಾವೇ ಕೊಂದುಕೊಳ್ಳುವುದನ್ನೂ (ಆತ್ಮಹತ್ಯೆಯನ್ನೂ) ನಾವು ಲೋಕದಲ್ಲಿ ಕಾಣುತ್ತೇವೋ, ಹಾಗೇ ತನ್ನನ್ನೇ ತಾನು ಎದುರಿಸುವ ಈ ಯುದ್ಧ ನಡೆಯಿತು. 

ಆ ಅಚಿಂತ್ಯ ಶಕ್ತಿಯಿಂದ ಪ್ರೇರಿಸಲ್ಪಟ್ಟ ತನ್ನಿಂದಲೇ ಎಲ್ಲಾ ಆಯುಧಗಳೂ ನುಂಗಲ್ಪಡಲು, ಅಶ್ವತ್ಥಾಮನು ಅಲ್ಲಿಯೇ, ತನ್ನ ಅಂತರ್ಯಾಮಿಯಾಗಿರುವ ನಾರಾಯಣನಿಗೆ ತನ್ನನ್ನೇ ಪಶುವನ್ನಾಗಿ ಕಲ್ಪಿಸಿ ಮಾನಸ ಯಜ್ಞವನ್ನು ಮಾಡಿದನು.  

 

ಯಜ್ಞತುಷ್ಟೇನ ಹರಿಣಾ ಪ್ರೇರಿತಃ ಶಙ್ಕರಃ ಸ್ವಯಮ್ ।

ಆತ್ಮನೇ ದ್ರೋಣಪುತ್ರಾಯ ದದೌ ಸರ್ವಾಯುಧಾನಿ ಚ ॥೨೮.೧೩೧॥

 

ಉವಾಚ ಚಾಹಮಾದಿಷ್ಟೋ ವಿಷ್ಣುನಾ ಪ್ರಭವಿಷ್ಣುನಾ ।

ಅರಕ್ಷಂ ಪಾರ್ತ್ಥಶಿಬಿರಮಿಯನ್ತಂ ಕಾಲಮೇವ ತು ॥೨೮.೧೩೨॥

 

ಯಜ್ಞದಿಂದ ತೃಪ್ತನಾದ ನಾರಾಯಣನಿಂದ ಪ್ರೇರಿಸಲ್ಪಟ್ಟ ಸ್ವಯಂ ರುದ್ರನು,  ತಾನೇ ಆಗಿರುವ ಅಶ್ವತ್ಥಾಮನಿಗೆ ಎಲ್ಲಾ ಆಯುಧಗಳನ್ನು ಹಿಂತಿರುಗಿಸಿದ. ‘ನಾನು ಸರ್ವಸಮರ್ಥನಾದ ನಾರಾಯಣನ ಅಣತಿಗೊಳಗಾಗಿ ಪಾಂಡವರ ಶಿಬಿರವನ್ನು ಇಲ್ಲಿಯ ತನಕ ರಕ್ಷಿಸಿದೆ.  

 

ತದಿಚ್ಛಯೈವ ನಿರ್ದ್ದಿಷ್ಟೋ ದಾಸ್ಯೇ ಮಾರ್ಗ್ಗಂ ತವಾದ್ಯ ಚ ।

ಆಯುಧಾನಿ ಚ ಸರ್ವಾಣಿ ಹನ್ತುಂ ಸರ್ವಾನಿಮಾನ್ ಜನಾನ್ ॥೨೮.೧೩೩॥

 

ಇತ್ಯುದೀರ್ಯ್ಯ ಪ್ರದಾಯಾSಶು ಸರ್ವಾ ಹೇತಿರ್ವೃಷಧ್ವಜಃ ।

ತತ್ರೈವಾನ್ತರ್ದ್ದದೇ ಸೋSಪಿ ಪ್ರೋವಾಚ ಕೃಪಸಾತ್ವತೌ ॥೨೮.೧೩೪॥

 

ಯೇ ನಿರ್ಯ್ಯಾಸ್ಯನ್ತಿ ಶಿಬಿರಾಜ್ಜಹಿತಂ ತಾಂಸ್ತು ಸರ್ವಶಃ ।

ಇತ್ಯುಕ್ತ್ವಾ ಪ್ರವಿವೇಶಾನ್ತರ್ದ್ಧನ್ವೀ ಖಡ್ಗೀ ಕೃತಾನ್ತವತ್ ॥೨೮.೧೩೫॥

 

ಆ ನಾರಾಯಣನ ಇಚ್ಛೆಯಿಂದಲೇ ಹೇಳಲ್ಪಟ್ಟ ನಾನು ಶಿಬಿರದ ಮಾರ್ಗವನ್ನು ನಿನಗೆ ಬಿಡುತ್ತಿದ್ದೇನೆ. ಈ ಎಲ್ಲಾ ಆಯುಧಗಳನ್ನು ಇವರನ್ನು ಕೊಲ್ಲಲು ನಿನಗೆ ನೀಡುತ್ತಿದ್ದೇನೆ’ ಎಂದು ಹೇಳಿ, ಎಲ್ಲಾ ಆಯುಧಗಳನ್ನೂ ಕೊಟ್ಟು, ನಂದೀಧ್ವಜನಾಗಿರುವ ಆ ಸದಾಶಿವನು ಅಲ್ಲಿಯೇ ಅಂತರ್ಧಾನವನ್ನು ಹೊಂದಿದನು. ಆಗ ಅಶ್ವತ್ಥಾಮನು ಕೃಪಾಚಾರ್ಯ ಮತ್ತು ಕೃತವರ್ಮನಿಗೆ ‘ಯಾರು ಶಿಬಿರದಿಂದ ಹೊರಗೆ ಓಡುತ್ತಾರೋ, ಅವರೆಲ್ಲರನ್ನೂ  ಕೊಲ್ಲಿರಿ’ ಎಂದು ಹೇಳಿ, ಧನುರ್ಧಾರಿಯಾಗಿ, ಖಡ್ಗವನ್ನು ಹಿಡಿದು ಯಮನಂತೆ ಪಾಂಡವರ ಶಿಬಿರದ ಒಳಹೊಕ್ಕನು.

No comments:

Post a Comment