ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 11, 2023

Mahabharata Tatparya Nirnaya Kannada 28-71-78

 

ತತೋ ಭೀಮಃ ಸರ್ವಲೋಕಸ್ಯ ಧರ್ಮ್ಮಂ ಪ್ರಕಾಶಯನ್ ವಾಕ್ಯಮಿದಂ ಜಗಾದ ।

ಊರೂ ತವಾಹಂ ಹಿ ಯಥಾಪ್ರತಿಜ್ಞಂ ಭೇತ್ಸ್ಯಾಮಿ ನೈವಾತ್ರ ವಿಚಾರಣೀಯಮ್ ॥೨೮.೭೧॥

 

ತದನಂತರ ಭೀಮಸೇನನು ಎಲ್ಲರೂ ನೋಡುತ್ತಿರುವಾಗಲೇ ಈ ಗುಹ್ಯ ಧರ್ಮವನ್ನು ಪ್ರಕಾಶಪಡಿಸುತ್ತಾ, ಈ ಮಾತನ್ನು ಹೇಳಿದ: ‘ಪ್ರತಿಜ್ಞೆಗೆ ಅನುಗುಣವಾಗಿ ನಾನು ನಿನ್ನ ಎರಡೂ ತೊಡೆಗಳನ್ನು ಮುರಿಯುತ್ತೇನೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.’

 

ಇತ್ಯುಕ್ತವನ್ತಂ ಪ್ರಸಸಾರ ಚಾSಜೌ ದುರ್ಯ್ಯೋಧನಸ್ತತ್ರ ಬಭೂವ ಯುದ್ಧಮ್ ।

ಭೀಮಸ್ತದಾSಗ್ರ್ಯಪ್ರಕೃತಿಂ ವಿಧಿತ್ಸುರ್ಮ್ಮನ್ದಃ ಸ ಆಜೌ ವ್ಯಚರಜ್ಜನಾರ್ತ್ಥೇ ॥೨೮.೭೨॥

 

ರೀತಿಯಾಗಿ ಹೇಳುತ್ತಿರುವ ಭೀಮಸೇನನನ್ನು ಯುದ್ಧದಲ್ಲಿ ದುರ್ಯೋಧನನು ಎದುರಿಸಿದ. ಅಲ್ಲಿ ಅವರಿಬ್ಬರ ನಡುವೆ ಯುದ್ಧ ನಡೆಯಿತು. ಭೀಮಸೇನನು ಜನರಿಗಾಗಿ ತನ್ನ ಮುಂದೂಡುವ ರಭಸವನ್ನು ಬಿಟ್ಟು, ಕೇವಲ ತನ್ನ ಶಿಕ್ಷಣವನ್ನು ತೋರಿಸುತ್ತಾ, ನಿಧಾನವಾಗಿ ಸಂಚರಿಸಿದನು.  

 

ದರ್ಶಯನ್ತೌ ಗದಾಮಾರ್ಗ್ಗಂ ಚಿತ್ರಂ ತೌ ಪ್ರವಿಚೇರತುಃ ।

ಬಲಭದ್ರೋSಪ್ಯಾಜಗಾಮ ತದಾ ತೌ ಪ್ರತಿವಾರಿತುಮ್ ॥೨೮.೭೩॥

 

ಚಿತ್ರ ವಿಚಿತ್ರವಾಗಿರುವ ಗದಾ ಸಂಚಾರವನ್ನು ತೋರಿಸುತ್ತಾ ಅವರಿಬ್ಬರೂ ಸಂಚರಿಸಿದರು. ಬಲರಾಮನೂ ಕೂಡಾ ಅಲ್ಲೇ ಸಮೀಪದಲ್ಲಿ ತೀರ್ಥಯಾತ್ರೆಯಲ್ಲಿದ್ದವನು ಈ ವಿಷಯವನ್ನು ಕೇಳಿ, ಅವರಿಬ್ಬರನ್ನೂ ತಡೆಯಲೆಂದು ಬಂದನು.

 

ವಾರಿತಾವಪಿ ತೇನೋಭೌ ನೈವ ಯುದ್ಧಂ ಪ್ರಮುಞ್ಚತಾಮ್ ।

ತತೋ ದದರ್ಶ ತದ್ ಯುದ್ಧಂ ಮಾನಿತಃ ಕೃಷ್ಣಪೂರ್ವಕೈಃ ॥೨೮.೭೪॥

 

ಬಲರಾಮನಿಂದ ತಡೆಯಲ್ಪಟ್ಟರೂ ಕೂಡಾ ಅವರಿಬ್ಬರೂ ಯುದ್ಧವನ್ನು ಬಿಡಲು ಕೇಳಲಿಲ್ಲ. ತದನಂತರ ಕೃಷ್ಣ ಮೊದಲಾದವರಿಂದ ಸತ್ಕೃತನಾಗಿ ಬಲರಾಮ ಆ ಯುದ್ಧವನ್ನು ಕಂಡನು.

 

ತೌ ಶಿಕ್ಷಾಬಲಸಂಯುಕ್ತೌ ಮಣ್ಡಲಾನಿ ವಿಚೇರತುಃ ।

ತತೋ ಭೀಮಂ ವಞ್ಚಯಿತುಂ ಧಾರ್ತ್ತರಾಷ್ಟ್ರಃ ಶಿರಃ ಕ್ಷಿತೌ ॥೨೮.೭೫॥

 

ನ್ಯಧಾದುಚ್ಛ್ರಿತಸಕ್ಥೀಕಸ್ತದಾ ಕೃಷ್ಣಾಭ್ಯನುಜ್ಞಯಾ ।

ಪೃಷ್ಠಮೂಲೇSಹನದ್ ಭೀಮೋ ಭಿನ್ನಸಕ್ಥಿಶ್ಚ ಸೋSಪತತ್ ॥೨೮.೭೬॥

 

ಅವರಿಬ್ಬರೂ ಅಭ್ಯಾಸ ಮತ್ತು ಬಲದಿಂದ ಕೂಡಿಕೊಂಡು ಮಂಡಲವನ್ನು ತಿರುಗಿದರು. ತದನಂತರ ದುರ್ಯೋಧನನು ಭೀಮಸೇನನನ್ನು ಮೋಸಗೊಳಿಸಲು ನೆಲದಲ್ಲಿ ತಲೆಯನ್ನು ಇಟ್ಟು, ತನ್ನ ಕಾಲನ್ನು ಮೇಲೆತ್ತಿದ. ಆಗ ಕೃಷ್ಣನ ಅನುಜ್ಞೆಯಿಂದ ಭೀಮಸೇನನು ಅವನ ಪೃಷ್ಠಮೂಲೆಗೆ ಹೊಡೆದ. ಇದರಿಂದ ಬೆನ್ನುಮೂಳೆಯನ್ನು ಸೊಂಟಕ್ಕೆ ಜೋಡಿಸುವ ಸಂಧಿಯು ಮುರಿದುಹೋಗಿ  ದುರ್ಯೋಧನ ತೊಡೆಮುರಿದು ನೆಲದಲ್ಲಿ ಬಿದ್ದ.   

 

ಪ್ರತಿಜ್ಞಾಪಾಲನಾರ್ತ್ಥಾಯ ನಾಭೇರ್ನ್ನೋಪರ್ಯ್ಯಧಸ್ತದಾ ।

ಗದಾಯುದ್ಧಸ್ಯ ಮರ್ಯ್ಯಾದಾಂ ಯಶಶ್ಚಾಪ್ಯಭಿರಕ್ಷಿತುಮ್ ॥೨೮.೭೭॥

 

ನಾಧಸ್ತಾನ್ಮದ್ಧ್ಯ ಏವಾಸೌ ನಿಜಘ್ನೇ ತಂ ವೃಕೋದರಃ ।

ಏವಂ ಪ್ರತಿಜ್ಞಾಯುಗ್ಮಾರ್ತ್ಥಂ ಭಗ್ನಂ ಸಕ್ಥಿಯುಗಂ ರಣೇ ॥೨೮.೭೮॥

 

ಪ್ರತಿಜ್ಞೆಯನ್ನು ಪಾಲನೆ ಮಾಡಲೋಸುಗ ಹೊಕ್ಕುಳಿನ ಮೇಲೆ ಭೀಮ ಹೊಡೆಯಲಿಲ್ಲ. ಗದಾಯುದ್ಧದ ನಿಯಮವನ್ನೂ, ತನ್ನ ಕೀರ್ತಿಯನ್ನೂ ಕೂಡಾ ರಕ್ಷಿಸಿಕೊಳ್ಳಲು ಹೊಕ್ಕುಳಿನಿಂದ ಕೆಳಗಡೆಯೂ ಹೊಡೆಯದೇ, ಬೆನ್ನಿನ ಬುಡದಲ್ಲಿ ಹೊಡೆದ. ಹೀಗೆ ತನ್ನ ಪ್ರತಿಜ್ಞೆಯನ್ನು ರಕ್ಷಿಸುತ್ತಾ ಭೀಮ ದುರ್ಯೋಧನನ ತೊಡೆಯ ಮೂಳೆಗಳೆರಡನ್ನೂ ಮುರಿದ.

[ಮಹಾಭಾರತದ ಶಲ್ಯಪರ್ವದಲ್ಲಿ (೫೯.೪೨-೪೫)  ಹೀಗೆ ಹೇಳಿದ್ದಾರೆ: ‘ತಮಾಪತನ್ತಂ ಸಮ್ಪ್ರೇಕ್ಷ್ಯ ಸಂರಬ್ಧಮಮಿತೌಜಸಂ ।  ಮೋಘಮಸ್ಯ ಪ್ರಹಾರಂ ತಂ ಚಿಕೀರ್ಷುರ್ಭರತರ್ಷಭ । ಅವಸ್ಥಾನೇ ಮತಿಂ ಕೃತ್ವಾ ಪುತ್ರಸ್ತವ ಮಹಾಮನಾಃ। ಇಯೇಷೋತ್ಪತಿತುಂ ರಾಜನ್ ಛಲಯಿಷ್ಯನ್ ವೃಕೋದರಮ್ । ಅಕ್ರುಧ್ಯದ್ ಭೀಮಸೇನಸ್ತು   ರಾಜ್ಞಸ್ತಸ್ಯ ಚಿಕೀರ್ಷಿತಮ್ । ಅಥಾಸ್ಯ ಸಮಭಿದ್ರುತ್ಯ ಸಮುತ್ಪತ್ಯ ಚ ಸಿಂಹವತ್ । ಗತ್ಯಾ ವಞ್ಚಯತೋ ರಾಜನ್ ಪುನರೇವೋತ್ಪತಯಿಷ್ಯತಃ । ಊರುಭ್ಯಾಂ ಪ್ರಾಹಿಣೋದ್ ರಾಜನ್ ಗದಾಂ ವೇಗೇನ ಪಾಣ್ಡವಃ’  ವೇಗದಿಂದ ಬರುತ್ತಿರುವ ಭೀಮಸೇನನನ್ನು ನೋಡಿ, ಅವನ ಹೊಡೆತವನ್ನು ವ್ಯರ್ಥವನ್ನಾಗಿಸಲು ಬಯಸಿದ ನಿನ್ನ ಮಗ,  ಮೋಸಮಾಡಬೇಕು ಎನ್ನುವ ಬುದ್ಧಿಯಿಂದ ನೆಗೆದ. ಇದನ್ನು ತಿಳಿದ ಭೀಮಸೇನ ಸಿಂಹದಂತೆ ‘ತೊಡೆಗಳಿಗಾಗಿ ’ ಹೊಡೆದ(ಅಂದರೆ ಎಲ್ಲಿ ಹೊಡೆದರೆ ಅದು ತೊಡೆಯನ್ನು ನಿಷ್ಕ್ರೀಯಗೊಳಿಸುತ್ತದೋ ಅಲ್ಲಿಗೆ ಹೊಡೆದ).- ಮಹಾಭಾರತದ ಈ ಶ್ಲೋಕಸಮುದಾಯದ ತಾತ್ಪರ್ಯವನ್ನೇ ಆಚಾರ್ಯರು ಸಂಗ್ರಹಿಸಿರುವುದನ್ನು ನಾವಿಲ್ಲಿ ತಿಳಿಯಬಹುದಾಗಿದೆ]

No comments:

Post a Comment