ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 29, 2023

Mahabharata Tatparya Nirnaya Kannada 29-06-12

ಅಸಾನ್ತ್ವಯಚ್ಚ ಬಾನ್ಧವಾನ್ ಸ ಪೌರಸಂಶ್ರಿತಾದಿಕಾನ್ ।

ದದೌ ಯಥೇಷ್ಟತೋ ಧನಂ ರರಕ್ಷ ಚಾನು ಪುತ್ರವತ್ ॥ ೨೯.೦೬ ॥

 

ಧರ್ಮರಾಜನು ತನ್ನ ಪ್ರಜೆಗಳನ್ನು, ತನ್ನನ್ನು ಆಶ್ರಯಿಸಿದವರನ್ನು, ಬಂಧುಗಳನ್ನೂ ಸಮಾಧಾನಗೊಳಿಸಿದ. ಅವರಿಗೆ ಅಗತ್ಯವಿದ್ದ ಹಣವನ್ನು ಕೊಟ್ಟ ಮತ್ತು ಅವರನ್ನು ಮಕ್ಕಳಂತೆ ರಕ್ಷಿಸಿದ ಕೂಡಾ.  

 

ಸ ಭೀಷ್ಮದ್ರೋಣಕರ್ಣ್ಣಾನಾಂ ವಧಾದ್ ದುರ್ಯ್ಯೋಧನಸ್ಯ ಚ ।

ಪಾಪಾಶಙ್ಕೀ ತಪ್ಯಮಾನೋ ರಾಜ್ಯತ್ಯಾಗೇ ಮನೋ ದಧೇ ॥ ೨೯.೦೭ ॥

 

ಆ ಧರ್ಮರಾಜನು ಭೀಷ್ಮ, ದ್ರೋಣ, ಕರ್ಣರ ಸಂಹಾರದಿಂದಲೂ, ದುರ್ಯೋಧನನ ಸಂಹಾರದಿಂದಲೂ  ತನಗೆ  ಪಾಪ ಬಂದಿರುವುದೋ ಏನೋ ಎಂದು ಶಂಕಿಸುವವನಾಗಿ, ಸಂಕಟಪಡುತ್ತಾ, ರಾಜ್ಯವನ್ನು ಬಿಡುತ್ತೇನೆ ಎಂದು ಮನಸ್ಸಿನಲ್ಲಿ ನಿರ್ಧಾರಮಾಡಿದನು.

 

ಸೋSನುಜೈಃ ಕೃಷ್ಣಯಾ ವಿಪ್ರೈರಪ್ಯುಕ್ತೋ ಧರ್ಮ್ಮಶಾಸನಮ್ ।

ಭೀಮಂ ಸಮ್ಪ್ರಾರ್ತ್ಥಯಿತ್ವೈವ ನ ವೇತ್ಥ್ಸಿತ್ಯಾಹ ಫಲ್ಗುನಮ್ ॥ ೨೯.೦೮ ॥

 

ತಮ್ಮಂದಿರಿಂದಲೂ, ದ್ರೌಪದೀದೇವಿಯಿಂದಲೂ, ಬ್ರಾಹ್ಮಣರಿಂದಲೂ ಕೂಡಾ ಧರ್ಮಾನುಶಾಸನದ ಬಗ್ಗೆ ಹೇಳಿಸಿಕೊಳ್ಳಲ್ಪಟ್ಟವನಾಗಿ, ಭೀಮಸೇನನಲ್ಲಿ ಬೇಡಿಕೊಂಡು(ಇನ್ನೂ ಹೆಚ್ಚಿನ ಧರ್ಮಶಿಕ್ಷಣ ಮಾಡಬೇಡ ಎಂದು ಬೇಡಿಕೊಂಡು),  ಅರ್ಜುನನನ್ನು ಗದರಿಸಿದ(ಸೂಕ್ಷ್ಮಧರ್ಮವನ್ನು ನೀನು ತಿಳಿದಿಲ್ಲ ಎಂದು ಗದರಿದ).

[ನಾನು ರಾಜ್ಯವನ್ನು ಬಿಡುತ್ತೇನೆ, ಈ ರಾಜ್ಯ ಪಾಲನೆ ಮಾಡುವುದರಿಂದ ನನಗೆ ಯಾವ ಸುಖವೂ ಇಲ್ಲಾ ಎಂದು ಹೇಳಿ ಧರ್ಮರಾಜ ಪದತ್ಯಾಗಕ್ಕೆ ಮುಂದಾದಾಗ ತಮ್ಮಂದಿರು ಅವನಿಗೆ ಬುದ್ಧಿವಾದ ಹೇಳಿದರು. ಆಗ ಅವನು ಎಲ್ಲರ ಮಾತುನ್ನು ಕೇಳುತ್ತಾ, ಭೀಮನಲ್ಲಿ ಮುಂದೇನೂ ಹೇಳದಂತೆ ವಿನಂತಿಸಿದ. ಅರ್ಜುನನನ್ನು ಕುರಿತು- ಯುದ್ಧಶಾಸ್ತ್ರವಿದೇವ ತ್ವಂ ನ ವೃದ್ಧಾಃ ಸೇವಿತಾಸ್ತ್ವಯಾ। ಸಮಾಸವಿಸ್ತರವಿದಾಂ ನ ತೇಷಾಂ ವೇತ್ಸಿ ನಿಶ್ಚಯಮ್’(ಶಾಂತಿಪರ್ವ ೧೯.೧೨)- ನಿನಗೆ ಯುದ್ಧಶಾಸ್ತ್ರ ತಿಳಿದಿರಬಹುದು. ಆದರೆ ನೀನೆಂದೂ ವೃದ್ಧರ ಸೇವೆ ಮಾಡಿಲ್ಲ. ಆದುದರಿಂದ ಧರ್ಮನಿಶ್ಚಯವು ನಿನಗೆ ತಿಳಿಯದು’ ಎಂದು ಗದರಿದ.]

 

ತಸ್ಮಿನ್ ಕ್ರುದ್ಧೇ ನೃಪಂ ಪ್ರಾಹುರ್ವಿಪ್ರಾಸ್ತ್ವತ್ತೋSಪಿ ತತ್ವವಿತ್ ।

ಶಕ್ರೋSರ್ಜ್ಜುನ ಇತಿ ಶ್ರುತ್ವಾSಪ್ಯೇತದ್ಧರ್ಮ್ಮೇ ಸಸಂಶಯಮ್ ॥ ೨೯.೦೯ ॥

 

ಯುಧಿಷ್ಠಿರನ ಮಾತಿನಿಂದ ಅರ್ಜುನ ಕೋಪಗೊಳ್ಳುತ್ತಿರಲು, ಬ್ರಾಹ್ಮಣರು ಧರ್ಮರಾಜನನ್ನು ಕುರಿತು- ‘ಅರ್ಜುನನು ಇಂದ್ರನಾಗಿದ್ದಾನೆ. ಅದರಿಂದ ನಿನಗಿಂತಲೂ ಕೂಡಾ ಧರ್ಮವನ್ನು ಅವನು ತಿಳಿದಿದ್ದಾನೆ’  ಎಂದರು. ಇದನ್ನು ಕೇಳಿಯೂ ಕೂಡಾ, ಧರ್ಮದ ಕುರಿತು ಯುಧಿಷ್ಠಿರ ಸಂಶಯದಲ್ಲೇ ಉಳಿದ.

 

ಮತ್ಸ್ನೇಹಾದೇವ ಸರ್ವೇSಪಿ ಧರ್ಮ್ಮೋSಯಮಿತಿ ವಾದಿನಃ ।

ಇತ್ಯೇವಂ ಶಙ್ಕಮಾನಂ ತಮೂಚತುರ್ವಿಪ್ರಯಾದವೌ ॥ ೨೯.೧೦ ॥

 

ಕೃಷ್ಣೌ ಧರ್ಮ್ಮೋSಯಮಿತ್ಯೇವ ಶಾಸ್ತ್ರಯುಕ್ತ್ಯಾ ಪುನಃಪುನಃ ।

ನಾತಿನಿಶ್ಚಿತಬುದ್ಧಿಂ ತಂ ತದಾSಪಿ ಪುರುಷೋತ್ತಮೌ  ॥ ೨೯.೧೧ ॥

 

ಹತಪಕ್ಷಗತತ್ವೇನ ತಚ್ಛಙ್ಕಾಯಾ ಅಗೋಚರಃ ।

ಯತೋ ಭೀಷ್ಮಸ್ತತೋ ಯಾಹಿ ತಮಿತ್ಯೂಚತುರವ್ಯಯೌ ॥ ೨೯.೧೨ ॥

 

ತನ್ನ ಮೇಲಿನ ಪ್ರೀತಿಯಿಂದ ಎಲ್ಲರೂ ಈರೀತಿಯಾಗಿ ಧರ್ಮವನ್ನು ಹೇಳುತ್ತಿದ್ದಾರೆ ಎಂದು ಸಂದೇಹಪಡುತ್ತಿರುವ ಧರ್ಮರಾಜನನ್ನು ಕುರಿತು ವೇದವ್ಯಾಸರು ಮತ್ತು ಶ್ರೀಕೃಷ್ಣ ‘ಇದು ಧರ್ಮ’ ಎಂದು ಶಾಸ್ತ್ರದ ಅನೇಕ ಯುಕ್ತಿಗಳಿಂದ ಮತ್ತೆ ಮತ್ತೆ ಹೇಳಿದರೂ ಕೂಡಾ, ದೃಢನಿಶ್ಚಯಕ್ಕೆ ಬರಲಾಗದ ಧರ್ಮರಾಜನನ್ನು ಕುರಿತು ವೇದವ್ಯಾಸ-ಕೃಷ್ಣರು- ‘ಶತ್ರುವಿನ ಪಕ್ಷದಲ್ಲಿರುವ ಭೀಷ್ಮಾಚಾರ್ಯರ ಮಾತನ್ನು ನೀನು ಸಂಶಯಪಡಲಾರೆ. ನಿನ್ನ ಸಂದೇಹಕ್ಕೆ ಸಿಲುಕದ ಭೀಷ್ಮರು ಎಲ್ಲಿದ್ದಾರೋ, ಅವರನ್ನು ಕುರಿತು ಹೋಗು’ ಎಂದು ಹೇಳಿದರು.

No comments:

Post a Comment